ಚಿಕ್ಕಮಗಳೂರು: ಪ್ರವಾಸಕ್ಕೆಂದು ನಗುನಗುತ ಬಂದಿದ್ದ ಕರುಳ ಕುಡಿ ಹೆಣವಾಗಿ ಹೋದರೆ ಆ ಹೆತ್ತವರ ಸಂಕಟ ಹೇಳತೀರದು. ಕೇರಳದಿಂದ ಕರ್ನಾಟಕ ಪ್ರವಾಸಕ್ಕೆ ಬಂದಿದ್ದ 10ನೇ ತರಗತಿಯ ವಿದ್ಯಾರ್ಥಿನಿ ಶ್ರೀನಂದಾ ಸಾವು ಈಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮೂರು ದಿನಗಳ ಕಾಲ ನಡೆದ ಸತತ ಹುಡುಕಾಟದ ನಂತರ, ಇಂದು ಮಾಣಿಕ್ಯಾಧಾರದ ಆಳವಾದ ಪ್ರಪಾತದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಘಟನೆಯ ಹಿನ್ನೆಲೆ:
ಕೇರಳ ಮೂಲದ ಈ ಕುಟುಂಬ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸಕ್ಕೆ ಬಂದಿತ್ತು. ಹಂಪಿಯ ಸೌಂದರ್ಯ ಸವಿದು, ಮೂರು ದಿನಗಳ ಹಿಂದೆ ಚಿಕ್ಕಮಗಳೂರಿಗೆ ಭೇಟಿ ನೀಡಿತ್ತು. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಬಾಬಾಬುಡನ್ ಗಿರಿಯ ಮಾಣಿಕ್ಯಾಧಾರ ಜಲಪಾತದ ಬಳಿ ಈ ಕುಟುಂಬ ಹೋಗಿದ್ದಾಗ, ಬಾಲಕಿ ಶ್ರೀನಂದಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಎಲ್ಲಿ ಹುಡುಕಿದರೂ ಸಿಗದಿದ್ದಾಗ ಕಿಡ್ನ್ಯಾಪ್ ಆಗಿರಬಹುದು ಎಂದು ಹೆತ್ತವರು ಆತಂಕಗೊಂಡಿದ್ದರು.
ಪ್ರಪಾತದಲ್ಲಿ ಸಿಕ್ಕಿದ ಮೃತದೇಹ:
ಬಾಲಕಿ ನಾಪತ್ತೆಯಾದ ತಕ್ಷಣ ಪೊಲೀಸರು ಮತ್ತು ಸ್ಥಳೀಯ ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿದ್ದವು. ಮೂರು ದಿನಗಳ ಸುದೀರ್ಘ ಹುಡುಕಾಟದ ಬಳಿಕ, ಮಾಣಿಕ್ಯಾಧಾರದ ನೂರಾರು ಅಡಿ ಆಳದ ಕಂದಕದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರಪಾತದಿಂದ ಮೃತದೇಹವನ್ನು ಮೇಲೆತ್ತಲು ತಂಡವು ಹರಸಾಹಸ ಪಡಬೇಕಾಯಿತು.
ಸಾವು ತಂದ ಫೋನ್ ಚಟ ಮತ್ತು ಅಪ್ಪನ ಕೋಪ?
ಪ್ರಾಥಮಿಕ ಮಾಹಿತಿಯ ಪ್ರಕಾರ, ಶ್ರೀನಂದಾ ಫೋನ್ನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದಳು. ಮಾಣಿಕ್ಯಾಧಾರಕ್ಕೆ ಹೋದಾಗಲೂ ಆಕೆ ಸೋಷಿಯಲ್ ಮೀಡಿಯಾ ರೀಲ್ಸ್ ಮಾಡುವುದರಲ್ಲಿ ಮಗ್ನಳಾಗಿದ್ದಳು. ಇದನ್ನು ಕಂಡು ಅಪ್ಪ, ಸಂಬಂಧಿಕರ ಮುಂದೆ ಆಕೆಗೆ ಬೈದಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಶ್ರೀನಂದಾ ‘ಐ ಹೇಟ್ ಯೂ ಅಪ್ಪ’ ಎನ್ನುವ ಮನಸ್ಥಿತಿಯಲ್ಲಿ ಪ್ರಪಾತಕ್ಕೆ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂಬುದು ಒಂದು ವಾದ. ಆದರೆ, ಫೋಟೋ ಅಥವಾ ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎಂಬ ಶಂಕೆಯೂ ಇದೆ.
ಕಿಡ್ನ್ಯಾಪ್ ಅಲ್ಲ, ಸಾವು ನಿಗೂಢ:
ಆರಂಭದಲ್ಲಿ ಯಾರೋ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದ ಪೋಷಕರು, ಮೃತದೇಹ ಸಿಕ್ಕಿದ ಮೇಲೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನುತ್ತಿದ್ದಾರೆ. ಆದರೆ ಪೊಲೀಸರು ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ. ರೀಲ್ಸ್ ಹುಚ್ಚು ಮತ್ತು ಕ್ಷಣಿಕ ಕೋಪ ಇಂದು ಒಂದು ತುಂಬು ಜೀವವನ್ನು ಬಲಿಪಡೆದಿದೆ. ನಗುನಗುತ ಕರ್ನಾಟಕ ನೋಡಲು ಬಂದಿದ್ದ ಮಗಳು ಶವವಾಗಿ ಮರಳುತ್ತಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.