ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಮನೆಗಳು ತೆರವು ಮಾಡಿರುವುದು
ಬೆಂಗಳೂರು, ಜನವರಿ 1: ಮೂರು ದಿನಗಳ ಹಿಂದೆ ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ (ಕೋಗಿಲು ಲೇಔಟ್) ನೆಲೆಸಿದ್ದ ಅಕ್ರಮ ನಿವಾಸಿಗಳಿಗೆ ಸಿಎಂ ಸಿದ್ದರಾಮಯ್ಯ ಸೂರಿನ ಬಾಗ್ಯ ನೀಡಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಬೀದಿಯಲ್ಲಿ ನಿಂತಿರುವ ಕೆಜಿ ಹಳ್ಳಿ, ಡಿಜೆ ಹಳ್ಳಿ (ಕೆ.ಜಿ.ಹಳ್ಳಿ–ಡಿ.ಜೆ.ಹಳ್ಳಿ) ಮೂಲ ನಿವಾಸಿಗಳ ಅಳಲು ಕೇಳುವವರೇ ಇಲ್ಲ. ಒತ್ತುವರಿ ತೆರವು ಹೆಸರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಕನ್ನಡಿಗರು ಈಗ ಸರ್ಕಾರದ ತಾರತಮ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಜೆಯಲ್ಲಿ ಅಕ್ಟೋಬರ್ 31 ರಂದು ಹಳ್ಳಿಯಲ್ಲಿ ಇಲಾಖೆ ಜಾಗ ಎಂದು ಯಾವುದೇ ನೋಟೀಸ್ ಇಲ್ಲದೆ, ಸೂಚನೆಯೂ ಇಲ್ಲದೆ ಏಕಾಏಕಿ ಮನೆಗಳನ್ನು ನೆಲಸಮ ಮಾಡಲಾಗಿದೆ. 150 ವರ್ಷಗಳಿಂದ ವಾಸವಾಗಿದ್ದ 29 ಕುಟುಂಬಗಳ ಮನೆ ನೆಲಸಮ ಮಾಡಲಾಗಿದೆ.
ಕೆಜೆ ಹಳ್ಳಿಯ ಸರ್ವೆ ನಂಬರ್ 71 ರಲ್ಲಿ 1 ಕೇಂದ್ರ 37 ಗುಂಟೆ ಜಾಗದಲ್ಲಿ ಚೂನಾ ಲೈನ್ ಜನರಿಗಾಗಿ 1984 ರಲ್ಲಿ 1 ಬೆಳ್ಳಿ 28 ಗುಂಟೆ ಸರ್ಕಾರ ನೀಡಿದ ಜಾಗವಾಗಿದೆ. ತದನಂತರ ಒಂಟಿ ಮನೆ ಯೋಜನೆಡಿಯಲ್ಲಿ 2015 ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದಲೇ ಮನೆ ಒಂಟಿ ಮನೆಗಳ ನಿರ್ಮಾಣ ಕೂಡ ಮಾಡಿಕೊಡಲಾಗಿದೆ. ಆದರೆ, ಅಕ್ಟೋಬರ್ 31 ರಂದು ಬಿಡಿಎ ಅಭಿವೃದ್ಧಿ ಹೆಸರಲ್ಲಿ ಸ್ಥಳೀಯ ನಿವಾಸಿಗಳನ್ನು ತೆರವು ಮಾಡಿಸಿ ಮನೆ ನೆಲಸಮ ಮಾಡಲಾಗಿದೆ. ಇದೆಲ್ಲ ಆಗಿ ತಿಂಗಳು ಕಳೆದರೂ ಯಾವುದೇ ಪರಿಹಾರವೂ ಇಲ್ಲ, ಮನೆಯೂ ಇಲ್ಲದೆ ಸಂತ್ರಸ್ತರು ಪರದಾಡುವಂತಾಗಿದೆ.
ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?
‘ಕೋಗಿಲು ಲೇಔಟ್ ನಲ್ಲಿ ಕೇರಳಿಗರ ಮೇಲೆ ತೋರಿದ ಪ್ರೀತಿ ಇಲ್ಲಿಯೂ ತೋರಿ. ನಮಗೆ ಮನೆ ಕೊಡಿ ನಾವೇನು ಪಾಪ ಮಾಡಿದ್ದೇವೆ’ ಎಂಬುದು ಕೆಜಿ ಹಳ್ಳಿ, ಡಿಜೆ ಹಳ್ಳಿ ಕನ್ನಡಿಗರ ಪ್ರಶ್ನೆಯಾಗಿದೆ. ಓಟರ್ ಐಡಿ ಇದೆ, ಆಧಾರ್ ಕಾರ್ಡ್ ಇದೆ. ಬಿಪಿಎಲ್ ಕಾರ್ಡ್ ಕೂಡ ಇದೆ. ಆದರೆ ಕನ್ನಡಿಗರಿಗೆ ಮನೆ ಇಲ್ಲ. ಕನ್ನಡಿಗರಿಗೇ ನೀಡದ ವಿಶೇಷ ಸೌಲಭ್ಯ ಅಕ್ರಮವಾಗಿ ನೆಲೆಸಿದ್ದ ಕೇರಳಿಗರಿಗೆ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಇನ್ನಾದರೂ ಈ ಕಡೆ ಗಮನ ಹರಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.
ವರದಿ: ಅರುಣ್ ಕುಮಾರ್ ಆರ್, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ