ಗದಗ, (ಜನವರಿ 13): ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ 8ನೇ ತರಗತಿಯ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯಲು ಸರ್ಪವೊಂದು ಇರುತ್ತೆ ಎಂದು ಗ್ರಾಮದ ಹಿರಿಯರು ಮಾತನಾಡುತ್ತಿದ್ದರು, ನಿಧಿ ಸಿಕ್ಕಿದವರಿಗೆ ಒಳ್ಳೆಯದಾಗುವುದಿಲ್ಲ ಎನ್ನುವ ಮಾತುಗಳು ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಇದರ ನಡುವೆ ಪ್ರಜ್ವಲ್ ಕಟುಂಬಕ್ಕೆ ಶುಕ್ರದೆಸೆ ಆರಂಭವಾಗಿದೆ. ಹೌದು… ಸರ್ಕಾರಕ್ಕೆ ನಿಧಿ ಕೊಟ್ಟು ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಬಿ.ಹೆಚ್. ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಟಿವಿ9 ವರದಿಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆ, ಪ್ರಜ್ವಲ್ಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಲಾಗಿದೆ. ಇನ್ನೊಂದೆಡೆ ಕುಟುಂಬಕ್ಕೆ ಮನೆ ಹಾಗೂ ನೌಕರಿ ಕೊಡುವ ಬಗ್ಗೆಯೂ ಜಿಲ್ಲಾ ಉಸ್ತುವರಿ ಸಚಿವ ಎಚ್ಕೆ ಪಾಟೀಲ್ ಸುಳಿವು ನೀಡಿದ್ದಾರೆ.
ಇಂದು (ಜನವರಿ 13) ಲಕ್ಕುಂಡಿಗೆ ಭೇಟಿ ನೀಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಪ್ರಜ್ವಲ್ ಕುಟುಂಬವನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪ್ರಜ್ವಲ್ ಕುಟುಂಬಕ್ಕೆ ನೆರವು ನೀಡಬೇಕೆಂದು ಹಿರಿಯರು ಮನವಿ ಮಾಡಿದ್ದಾರೆ. ಮನೆ, ಜಾಗ, ಬಾಲಕನ ತಾಯಿಗೆ ಕೆಲಸ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ 3 ವಿಚಾರವನ್ನು ಸಿಎಂ ಜೊತೆ ಚರ್ಚಿಸುತ್ತೇನೆ. ಕಾನೂನು ಪ್ರಕಾರ ಏನ್ ಕೊಡಬೇಕು ಎಲ್ಲಾ ಕುಟುಂಬಕ್ಕೆ ಮಾಡಲಾಗುತ್ತೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ, ನೌಕರಿ ಕೊಡಲಾಗುತ್ತೆ.ಹೂವು ಕಟ್ಟಿ ಮಾರಾಟ ಮಾಡಿದರೆ ಮಾತ್ರ ಬದುಕು. ಇಂಥ ಬಡತನದಲ್ಲೂ ಬಂಗಾರ ನಮ್ಮದಲ್ಲ ಅಂತ ಮಾಹಿತಿ. ಕುಟುಂಬದ ಪ್ರಾಮಾಣಿಕತೆಗೆ ಗೌರವ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ