
ಇಂದು ಬೆಂಗಳೂರಿನ ಜನನಿಬಿಡ ರಸ್ತೆಗಳು, ವಸತಿ ಪ್ರದೇಶಗಳು ಮತ್ತು ಬೀದಿಗಳಲ್ಲಿ ಎತ್ತರವಾಗಿ ನಿಂತಿರುವ ದಟ್ಟವಾದ ಮರಗಳ ಸಾಲುಗಳು, ಪ್ರತೀವರ್ಷ ಈ ಸಮಯದಲ್ಲಿ ಕಾಣುವ ಟಬೂಬಿಯಾ ರೋಸಿಯಾ ಹೂವುಗಳು ಕೇವಲ ಪ್ರಕೃತಿಯ ಕೊಡುಗೆಯಲ್ಲ. ಅವುಗಳ ಹಿಂದೆ ಒಬ್ಬ ದೂರದೃಷ್ಟಿಯುಳ್ಳ ಅರಣ್ಯಾಧಿಕಾರಿಯ ಅಹರ್ನಿಶಿ ಶ್ರಮ, ದೃಢ ನಿಲುವು ಮತ್ತು ಪರಿಸರದ ಮೇಲಿನ ಅಪಾರ ಕಾಳಜಿ ಅಡಗಿದೆ. ಆ ವ್ಯಕ್ತಿಯೇ ನಿವೃತ್ತ ಐಎಫ್ಎಸ್ ಅಧಿಕಾರಿ ಹಾಗೂ ಪ್ರಸಿದ್ಧ ಸಂರಕ್ಷಣಾವಾದಿ ಎಸ್.ಜಿ. ನೆಗಿನ್ಹಾಲ್. ಬೆಂಗಳೂರು “ಉದ್ಯಾನ ನಗರಿ” ಎಂದು ಕರೆಯಲ್ಪಡುವುದಕ್ಕೆ ಪ್ರಮುಖ ಕಾರಣಕರ್ತರಲ್ಲಿ ಸೇತುರಾಮ್ ಗೋಪಾಲರಾವ್ ನೇಗಿನ್ಹಾಲ್ ಒಬ್ಬರು. ನಗರವನ್ನು ಹಸಿರಿನ ಹೊದಿಕೆಯಿಂದ ಆವರಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿ, ಅದರ ಅನುಷ್ಠಾನಕ್ಕೆ ಜೀವ ತ್ಯಾಗದಂತೆ ದುಡಿದವರು. ವನ್ಯಜೀವಿ ಮತ್ತು ಸಸ್ಯಜೀವನದ ಪರಿಣಿತರಾಗಿದ್ದ ಅವರು, ಪ್ರಶಸ್ತಿ ಪಡೆದ ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದರು. ಅಲ್ಲದೆ, ಪ್ರಾಜೆಕ್ಟ್ ಟೈಗರ್ ಯೋಜನೆಯ ಆರಂಭಿಕ ಹಂತಗಳಲ್ಲಿ ಪ್ರಮುಖ ಪಾತ್ರವಹಿಸಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.