ಮಂಡ್ಯ, ನವೆಂಬರ್ 18: ಜಿಲ್ಲೆಯ ಶಿವನಸಮುದ್ರದ ಬಳಿಯ ನಾಲೆಯಲ್ಲಿ (ಕಾಲುವೆ) ಮೂರು ದಿನ ಸಿಲುಕಿ ಪರದಾಡಿದ್ದ ಕಾಡಾನೆಯನ್ನು (ಕಾಡು ಆನೆ) ಸತತ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಮೇಲಕ್ಕೆತ್ತಿದ್ದಾರೆ. ಸದ್ಯ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
ಆಹಾರ ಅರಸಿ ಬಂದು ನಾಲೆಗೆ ಬಿದ್ದ ಕಾಡಾನೆ
10 ರಿಂದ 15 ವರ್ಷ ಪ್ರಾಯದ ಕಾಡಾನೆ ಆಹಾರ ಅರಸಿ ಬಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವವಸಮುದ್ರದ ನಾಲೆಗೆ ಬಿದ್ದಿದೆ. ಖಾಸಗಿ ಪವರ್ ಸ್ಟೇಷನ್ಗೆ ನೀರು ಸರಬರಾಜು ಮಾಡುವ ನಾಲೆಯಲ್ಲಿ 3 ದಿನ ಸಿಲುಕಿತ್ತು. ಸ್ಥಳದಲ್ಲೇ ಬೀಡುಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಾಡಾನೆ ಆಹಾರ ನೀಡಿದ್ದರು.
ಇದನ್ನೂ ಓದಿ: ಚಾಮರಾಜನಗರ ತಮಿಳುನಾಡು ಗಡಿ ದಿಂಬಂ ಘಾಟ್ನಲ್ಲಿ ಕಾಡಾನೆ ಉಪಟಳ: ವಿಡಿಯೋ ವೈರಲ್
ನಾಲೆಯಿಂದ ಆನೆಯ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ನಿನ್ನೆ ಪ್ರಯತ್ನ ಪಟ್ಟಿದ್ದರು. ಆದರೆ ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಚರಣೆ ಮಾಡಲಾಗಿದೆ.
ಸ್ಥಳದಲ್ಲಿ ಪಟಾಕಿ ಸಿಡಿಸಿ ತಾನಾಗಿಯೇ ಕಾಡಾನೆ ಮೇಲಕ್ಕೆ ಬರುವಂತೆ ಮಾಡಿದೆ. ಆದರೆ ಅದು ಸಾಧ್ಯವಾಗಿಲ್ಲ. ಇನ್ನು ಅರಣ್ಯ ಇಲಾಖೆ ಇಟ್ಟಿರುವ ಕಂಟೇನರ್ ಅನ್ನು ಕಾಡಾನೆ ದೂಡಿದೆ. ಬಳಿಕ ಅರಿವಳಿಕೆ ಚುಚ್ಚುಮದ್ದು ನೀಡಿದರು. ಚುಚ್ಚುಮದ್ದು ನೀಡುವಂತೆ ಕಾಡಾನೆ ಕೂಗಾಡಿ ಆರ್ಭಟಿಸಿದೆ.
ಕ್ರೇನ್ ಮೂಲಕ ಕಾಡಾನೆ ರಕ್ಷಣೆ
2 ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಕಾಡಾನೆ ಪುಸ್ತಕತಪ್ಪಿ ನಾಲೆಯಲ್ಲೇ ಕುಸಿದುಬಿದ್ದಿದೆ. ಬಳಿಕ ಸಿಬ್ಬಂದಿ ನಾಲೆಗೆ ಇಳಿದು ಕಾಡಾನೆಯ ಕಾಲುಗಳಿಗೆ ಬೆಲ್ಟ್ ಕಟ್ಟಿ ಕಬ್ಬಿಣದ ಮ್ಯಾಟ್ ಮೇಲೆ ಮಲಗಿಸಿ ಕ್ರೇನ್ ಮೂಲಕ ನಾಲೆಯಿಂದ ಕಾಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಿದ್ದಾರೆ.
ಇದನ್ನೂ ಓದಿ: ವಿರಾಜಪೇಟೆ: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ಸೊಂಡಿಲಿನಿಂದ ಎತ್ತಿ ರಕ್ಷಿಸಿದ ಕಾಡಾನೆ ಹಿಂಡು
ಸುರಕ್ಷಿತವಾಗಿ ಮೇಲೆತ್ತಿ ಲಾರಿ ಮೂಲಕ ಸ್ಥಳಾಂತರಿಸಿದ್ದಾರೆ. ಸದ್ಯ ಕಾಡನೆಗೆ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿ ಬಿಟ್ಟಿದ್ದಾರೆ. ಆ ಮೂಲಕ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.