ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್ ಪರಿಣಾಮ: ನೆಟ್ವರ್ಕ್ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು!
ಮಂಗಳೂರು, ನವೆಂಬರ್ 12: ದಕ್ಷಿಣ ಕನ್ನಡ ಜಿಲ್ಲೆ (ದಕ್ಷಿಣ ಕನ್ನಡ) ಮಂಗಳವಾರ (ಮಂಗಳೂರು) ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ನೆಟ್ವರ್ಕ್ ಜಾಮರ್ ಅಳವಡಿಕೆ ಮಾಡಲಾಗಿದೆ. ಆದರೆ ಈ ಜಾಮರ್ನಿಂದಾಗಿ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ನೆಟ್ವರ್ಕ್ ಸಿಗದೇ ಜನರು ಪರದಾಡುತ್ತಿದ್ದಾರೆ. ಈ ಜಾಮರ್ ನೆಟ್ ವರ್ಕ್ ಸಮಸ್ಯೆಯ ಬಿಸಿ ಕಾರಾಗೃಹದಿಂದ ಸುಮಾರು 800 ಮೀಟರ್ ದೂರದಲ್ಲೇ ಇರುವ ನ್ಯಾಯಾಲಯಕ್ಕೂ ತಟ್ಟಿದ್ದು, ವಕೀಲರಿಗೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಮಂಗಳೂರು ಕಾರಾಗೃಹದಲ್ಲಿ ಅಳವಡಿಸಲಾಗಿದೆ ಜಾಮರ್ ನಿಂದ ಸ್ಥಳೀಯರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ವಕೀಲರು ಗಡುವು ನೀಡಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ಮಂಗಳೂರು ವಕೀಲರ ಸಂಘ ಸರ್ಕಾರಕ್ಕೆ ರವಾನೆ ಮಾಡಿದೆ.
ಜೈಲಿನೊಳಗೆ ಕೈದಿಗಳಿಗೆ ಸಿಗುತ್ತಿದೆ ನೆಟ್ವರ್ಕ್, ಹೊರಗೆ ಇರೋ ಸಾರ್ವಜನಿಕರಿಗಿಲ್ಲ!
ಈ ಇಡೀ ಪ್ರಕರಣದಲ್ಲೇ ಒಂದು ವಿಪರ್ಯಾಸವಿದೆ. ಜೈಲಿನೊಳಗಿರುವ ಕೈದಿಗಳಿಗೆ ಸಿಗುವ ನೆಟ್ವರ್ಕ್, ಜೈಲಿನ ಸುತ್ತಮುತ್ತ ಇರುವ ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪವನ್ನು ವಕೀಲರು ಮಾಡಿದ್ದಾರೆ. ಕಾರಾಗೃಹದ ಒಳಗೆ ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ. ಆದರೆ ಹೊರಗೆ ನಾವು ನೆಟ್ ವರ್ಕ್ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ಕೋರ್ಟ್ನಲ್ಲಿ ಮೊಬೈಲ್ ಫೋನ್ ಮೂಲಕ ಕಕ್ಷಿದಾರರ ಜೊತೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಯಾರನ್ನು ಸಂಪರ್ಕಿಸುವುದಕ್ಕೂ ಸಾಧ್ಯ ಆಗ್ತಿಲ್ಲ. ಇದರಿಂದ ನಮ್ಮ ಕಾರ್ಯವೈಖರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ಗೆ ಮಂಗಳೂರು ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ನ್ಯಾಯಪೀಠ ಜೈಲಿನಲ್ಲಿ ಅಳವಡಿಸಲಾಗಿದೆ ಜಾಮರ್ನ ರೇಂಜ್ ಎಷ್ಟಿದೆ, ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ವರದಿ ನೀಡಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ: 4 ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್ಐಆರ್
ಒಟ್ಟಿನಲ್ಲಿ ಖೈದಿಗಳು ಮೊಬೈಲ್ ಬಳಕೆ ಮಾಡದಂತೆ ನೋಡಿಕೊಳ್ಳಲು ಹಾಕಿರುವ ಜಾಮರ್ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಸದ್ಯ ಜೈಲಿನ ಜಾಮರ್ ಸಮಸ್ಯೆ ವಿರುದ್ಧ ವಕೀಲರ ಸಂಘ ಗಂಭೀರ ಹೋರಾಟಕ್ಕೆ ಮುಂದಾಗಿದ್ದು ಈ ಪ್ರಕರಣ ಯಾವ ಸ್ವರೂಪ ಪಡೆಯುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ