
ಬೆಂಗಳೂರು (ಮಾ.29): ಪ್ರತಿಯೊಬ್ಬ ರಾಜನ ಇತಿಹಾಸ ನೋಡಿದಾಗ ಅಲ್ಲಿ ಹೀರೊ ಮತ್ತು ವಿಲನ್ ಇಬ್ಬರೂ ಕಾಣಿಸುತ್ತಾರೆ. ಜಗತ್ತಿಗೆ ರಾಕೆಟ್ ಸೈನ್ಸ್ ಪರಿಚಯಿಸಿದ್ದೇ ಟಿಪ್ಪು ಸುಲ್ತಾನ್. ಇಂದು ‘ಮೇಕ್ ಇನ್ ಇಂಡಿಯಾ’ ಎನ್ನುತ್ತಾರೆ, ಆದರೆ ಅಂದೇ ಟಿಪ್ಪು ‘ಮೇಕ್ ಇನ್ ಮೈಸೂರು’ ಮಾಡಲು ಮುಂದಾಗಿದ್ದರು. ಟಿಪ್ಪು 150 ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದ್ದನ್ನು ಯಾರೂ ಹೇಳುವುದಿಲ್ಲ. ರಾಜಕೀಯ ಕಾರಣಕ್ಕೆ ಹತ್ತು ದೇವಸ್ಥಾನ ದ್ವಂಸ ಮಾಡಿರಬಹುದು. ಅದನ್ನೇ ದೊಡ್ಡದಾಗಿ ಹೇಳುತ್ತಾರೆ ಎಂದು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು.
ಬೆಂಗಳೂರಿನಲ್ಲಿ ನಡೆದ ನವೀನ್ ಸೂರಿಂಜೆಯವರ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್, ವಿಜಯನಗರ ಸಾಮ್ರಾಜ್ಯ ಮತ್ತು ಸಂಘ ಪರಿವಾರದ ಸಿದ್ಧಾಂತಗಳ ಮೇಲೆ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ. ಇತಿಹಾಸವೆಂದರೆ ಕೇವಲ ರಾಜಕೀಯ ಲಾಭಕ್ಕಾಗಿ ಬಳಸುವ ಸಾಧನವಲ್ಲ, ಅದು ಸತ್ಯಗಳ ದರ್ಶನ ಮಾಡಿಸುವ ಕನ್ನಡಿ. ಆದರೆ ಇಂದು ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.