
ಮಂಗಳೂರು, ಮಾರ್ಚ್ 19: ರಾಜ್ಯದ ಕರಾವಳಿ ಭಾಗದಲ್ಲಿ ನಾಳೆ ಅಂದರೆ ಮಾರ್ಚ್ 20 ರಂದು ‘ಈದುಲ್ ಫಿತ್ರ್’ ಹಬ್ಬ (ಈದ್-ಉಲ್-ಫಿತರ್) ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಒಂದು ದಿನ ಮೊದಲೇ ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತಿದೆ. ಇಂದು ಶವ್ವಾಲ್ ಮಾಸದ ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ರಂಜಾನ್ ಹಬ್ಬ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಘೋಷಣೆ ಮಾಡಲಾಗಿದೆ. ಆ ಮೂಲಕ ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದ ಉಪವಾಸ ವ್ರತ ಮುಕ್ತಾಯ ಸಮಾರಂಭ.
ಇಂದಿಗೆ ಉಪವಾಸ ವ್ರತ ಕೊನೆ
ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಬಾಂಧವರು ಉಪವಾಸ ವ್ರತ ಆಚರಿಸುತ್ತಿದ್ದರು. ಚಂದ್ರದರ್ಶನ ಜೊತೆಗೆ ಇಂದಿಗೆ ಉಪವಾಸ ವ್ರತ ಕೊನೆಯಾಗಿದೆ. ಹೀಗಾಗಿ ನಾಳೆ ಮನೆಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ಹಬ್ಬ ಆಚರಿಸಲಾಯಿತು. ಇತ್ತ ಮನೆಗಳಲ್ಲಿ ಹಬ್ಬದ ಅಡುಗೆ ಕೂಡ ಜೋರಾಗಿದೆ.
ಇದನ್ನೂ ಓದಿ: ಪುಂಡರ ಅಟ್ಟಹಾಸ ನೋಡಿ! ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಚೆನ್ನೈ ಎಕ್ಸ್ಪ್ರೆಸ್ ವೆನಲ್ಲಿ ವ್ಹೀಲಿಂಗ್
ಶುಕ್ರವಾರ ಬೆಳಗಿನ ವೇಳೆ ಜಿಲ್ಲೆಯ ಪ್ರಮುಖ ಕಾಲೇಜುಗಳಲ್ಲಿ ವಿಶೇಷ ಈದ್ ನಮಸ್ಕಾರ. ಸಾವಿರಾರು ಭಕ್ತರು ಒಂದೇ ಸ್ಥಳದಲ್ಲಿ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಪರಸ್ಪರ ಹಸ್ತಲಾಘವ ಮತ್ತು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ನಾಳೆ ಸಾರ್ವತ್ರಿಕ ರಜೆ
ಇನ್ನು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅವರಿಂದ ರಂಜಾನ್ ಹಬ್ಬ ಘೋಷಣೆ ಆಗುತ್ತಿದ್ದಂತೆ ಇತ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ.ದರ್ಶನ್, ನಾಳೆ ಜಿಲ್ಲಾ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಸದ್ಯ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.