
<p>ಕಾಂತಾರ ಯಶಸ್ಸಿನ ಬಳಿಕ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡಿರುವ ರಿಷಬ್ ಶೆಟ್ಟಿ ಪತ್ನಿಯೊಂದಿಗೆ ರಾಜ್ಯದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ದರ್ಶನ ಪಡೆದರು.</p><p> </p><img><p>ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ತಮ್ಮ ‘ಕಾಂತಾರ’ (Kantara: Chapter 1) ಯಶಸ್ಸಿನ ಬಳಿಕ, ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಪತ್ನಿಯೊಂದಿಗೆ ರಾಜ್ಯದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ರಿಷಬ್ ದಂಪತಿ, ಆಂಜನೇಯನ ದರ್ಶನ ಪಡೆದರು.</p><img><p>ಕಾಂತಾರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಅವರು ರಾಜ್ಯದ ಪ್ರಮುಖ ಶಕ್ತಿಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ತಿರುಪತಿ, ಮಂತ್ರಾಲಯ ಮತ್ತು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಶೆಟ್ಟರು, ಇಂದು ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಹನುಮನ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿಗೆ ಆಗಮಿಸಿದರು.</p><img><p>ಬೆಟ್ಟದ ಮೇಲಿರುವ ಆಂಜನೇಯನ ದರ್ಶನಕ್ಕಾಗಿ ರಿಷಬ್ ಶೆಟ್ಟಿ ಅವರು ಸಾಮಾನ್ಯರಂತೆ 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಗೆ ತಲುಪಿದರು. ದೇವಸ್ಥಾನದಲ್ಲಿ ಮಾರುತಿಗೆ ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸಿದರು. ಈ ವೇಳೆ ಅಂಜನಾದ್ರಿಯ ದೈವಿಕ ಪರಿಸರದಲ್ಲಿ ರಿಷಬ್ ಶೆಟ್ಟಿ ದಂಪತಿ ಕೆಲವು ಕಾಲ ಕಳೆದು ಭಕ್ತಿ ಪರವಶರಾದರು</p><img><p>ದರ್ಶನದ ಬಳಿಕ ಅಂಜನಾದ್ರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ಯಾದಾಸಬಾಬಾ ಅವರು ರಿಷಬ್ ಶೆಟ್ಟಿ ಅವರಿಗೆ ಹನುಮ ಜನ್ಮಸ್ಥಳದ ಪುರಾಣ ಮತ್ತು ಇತಿಹಾಸದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಕಾಂತಾರ ಸಿನಿಮಾದ ಮೂಲಕ ದೈವಿಕ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ರಿಷಬ್ ಅವರ ಕಾರ್ಯವನ್ನು ಅರ್ಚಕರು ಈ ವೇಳೆ ಶ್ಲಾಘಿಸಿದರು.</p><img><p>ಅಂಜನಾದ್ರಿಗೆ ಭೇಟಿ ನೀಡಿದ ಈ ಸಂಭ್ರಮದ ಸಂದರ್ಭದಲ್ಲಿ ಪ್ರಧಾನ ಅರ್ಚಕ ವಿದ್ಯಾದಾಸಬಾಬಾ ಅವರು ರಿಷಬ್ ಶೆಟ್ಟಿ ಅವರಿಗೆ ದೇವಸ್ಥಾನದ ವತಿಯಿಂದ ಸನ್ಮಾನ ಮಾಡಿದರು. </p><img><p>ತಮ್ಮ ನೆಚ್ಚಿನ ನಟನನ್ನು ನೋಡಲು ಬೆಟ್ಟದ ಮೇಲೆ ಅಭಿಮಾನಿಗಳು ಮುಗಿಬಿದ್ದಿದ್ದರು. ರಿಷಬ್ ಶೆಟ್ಟಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರಾ ಎಂದು ಅಭಿಮಾನಿಗಳು ಮಾತಾಡಿಕೊಂಡರು.</p>
Source link
ಹನುಮನ ಜನ್ಮಸ್ಥಳ ಅಂಜನಾದ್ರಿಗೆ ರಿಷಬ್ ಶೆಟ್ಟಿ ಭೇಟಿ; 575 ಮೆಟ್ಟಿಲೇರಿ ಮಾರುತಿಯ ದರ್ಶನ ಪಡೆದ ದಂಪತಿ!