Sandhya Suraksha Scheme Scam; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್! | Sandhya Suraksha Scam Young Men Get Pension Surpur Files Complaint Tahsildar Sat

Sandhya Suraksha Scheme Scam; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್! | Sandhya Suraksha Scam Young Men Get Pension Surpur Files Complaint Tahsildar Sat


ಯಾದಗಿರಿ (ಅ.22): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಸಂಧ್ಯಾ ಸುರಕ್ಷಾ ಯೋಜನೆ’ ಅಡಿಯಲ್ಲಿ ವಯೋವೃದ್ಧರಿಗೆ ನೀಡಲಾಗುವ ಮಾಸಿಕ ಪಿಂಚಣಿಯಲ್ಲಿ ಭಾರೀ ಅಕ್ರಮ ಮತ್ತು ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಸುರಪುರ ತಾಲೂಕಿನಲ್ಲಿ ಸುಮಾರು 15 ಸಾವಿರ ಅನರ್ಹ ಫಲಾನುಭವಿಗಳಿಗೆ ಪಿಂಚಣಿ ಹಂಚಿಕೆಯಾಗಿದೆ ಎಂದು ತಿಳಿದುಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಕೋಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸದಿಂದ ಲೂಟಿ ಹೊಡೆಯಲಾಗಿದೆ.

ವಯಸ್ಸಿನ ಮಾನದಂಡ ಉಲ್ಲಂಘನೆ: 

ಸಂಧ್ಯಾ ಸುರಕ್ಷಾ ಯೋಜನೆಯ ನಿಯಮಗಳ ಪ್ರಕಾರ, 65 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾತ್ರ ಮಾಸಿಕ ಪಿಂಚಣಿ ಮಂಜೂರಾಗಬೇಕು. ಆದರೆ, ಸುರಪುರ ತಾಲೂಕಿನಲ್ಲಿ 45 ರಿಂದ 50 ವರ್ಷ ವಯಸ್ಸಿನೊಳಗಿನ ನೂರಾರು ಅನರ್ಹ ಫಲಾನುಭವಿಗಳು ಮಾಸಿಕ ರೂ. 1200/- ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ, ಸುರಪುರ ಮೂಲದ ಭೀಮಾಶಂಕರ್ ಎಂಬ ವ್ಯಕ್ತಿಯ ಪ್ರಕರಣವನ್ನು ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಅವರು ಬಯಲಿಗೆಳೆದಿದ್ದಾರೆ.

ಭೀಮಾಶಂಕರ್ ಅವರಿಗೆ ಕೇವಲ 47 ವರ್ಷ ವಯಸ್ಸಾಗಿದ್ದರೂ, ಅವರ ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಜನವರಿ 1, 1978 ಎಂದು ನಮೂದಿಸಿ, 1,200 ರೂಪಾಯಿಗಳನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಸಾವಿರಾರು ನಕಲಿ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ದಲ್ಲಾಳಿಗಳ ಪಾತ್ರ ಮತ್ತು ಅಧಿಕಾರಿಗಳ ಅಕ್ರಮದ ಜಾಲ: 

ಈ ಅಕ್ರಮದ ಹಿಂದೆ ದಲ್ಲಾಳಿಗಳ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಅನರ್ಹ ಫಲಾನುಭವಿಗಳಿಂದ ಕೆಲವೇ ದಲ್ಲಾಳಿಗಳು ಪ್ರತಿಯೊಬ್ಬರಿಂದಲೂ ರೂ. 5,000 ರಿಂದ 8,000 ರವರೆಗೆ ಲಂಚ ಪಡೆದು ಈ ನಕಲಿ ದಾಖಲೆಗಳ ಸೃಷ್ಟಿಗೆ ನೆರವಾಗಿದ್ದಾರೆ ಎನ್ನಲಾಗಿದೆ.

ವೃದ್ದಾಪ್ಯ ವೇತನ ಅಕ್ರಮ ಹೇಗೆ ನಡೆಯಿತು?
ವೃದ್ದಾಪ್ಯ ವೇತನ ಅಕ್ರಮ ನಡೆಯುವ ಹಿಂದಿನ ವಿಧಾನವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ:

  • 1. ಫಲಾನುಭವಿಗಳು ಪಿಂಚಣಿಗಾಗಿ ಅರ್ಜಿ ಸಲ್ಲಿಸುತ್ತಾರೆ.
  • 2. ಅರ್ಜಿದಾರರು ಅರ್ಹರೋ, ಅನರ್ಹರೋ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತೀರ್ಮಾನಿಸುತ್ತಾರೆ.
  • 3. ನಿಯಮಗಳನ್ನೇ ಗಾಳಿಗೆ ತೂರಿದ ಕಂದಾಯ ಅಧಿಕಾರಿಗಳು, ಕೆಲ ಗ್ರಾಮ ಲೆಕ್ಕಾಧಿಕಾರಿಗಳು (Village Accountants) ಆರಂಭದಲ್ಲಿ ಅರ್ಜಿಗಳನ್ನು ತಿರಸ್ಕರಿಸಿದರೂ, ಕೆಲವರು ಆ ಅರ್ಜಿಗಳನ್ನು ಪುರಸ್ಕರಿಸಿದ್ದಾರೆ. ಉದಾಹರಣೆಗೆ, ದೇವಿಕೇರಾ ಗ್ರಾಮದ ನಾಗಮ್ಮ ಎಂಬುವರ ಅರ್ಜಿ ವಯಸ್ಸಾಗದ ಕಾರಣಕ್ಕೆ ಲೆಕ್ಕಾಧಿಕಾರಿ ತಿರಸ್ಕರಿಸಿದರೂ, ಕಂದಾಯ ನಿರೀಕ್ಷಕರು ಅದನ್ನು ಪುರಸ್ಕರಿಸಿದ್ದಾರೆ.
  • 4. ಅಂತಿಮವಾಗಿ, ಕೇಸ್ ವರ್ಕರ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳು ಸೇರಿ ನಕಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಿದ್ದಾರೆ.

ತಹಸೀಲ್ದಾರ್‌ಗೆ ದೂರು, ಕ್ರಮಕ್ಕೆ ಆಗ್ರಹ:

ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಅವರು ಎಲ್ಲಾ ಸಾಕ್ಷಿ ಸಮೇತ ಸುರಪುರ ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ. ಆದರೆ, ದಾಖಲೆಗಳಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಲಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.



Source link

Leave a Reply

Your email address will not be published. Required fields are marked *