
<p>ರಿಷಬ್ ಶೆಟ್ಟಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ರಂಜನ್, ಅನಿರೀಕ್ಷಿತವಾಗಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ನಾಯಕನಾದರು. ನಟನೆಯಲ್ಲಿ ಆಸಕ್ತಿ ಇಲ್ಲದಿದ್ದರೂ, ಒಂದು ಸೆಲ್ಫಿ ಅದೃಷ್ಟವನ್ನೇ ಬದಲಿಸಿ, ‘ದಡ್ಡ ಪ್ರವೀಣ’ ಪಾತ್ರದ ಮೂಲಕ ಸಿನಿಮಾ ಹೀರೋ ಆಗಿ ರೂಪಿಸಿತು.</p><img><p>ಕೆಲವೊಮ್ಮೆ ಅದೃಷ್ಟ ಯಾವ ರೀತಿ, ಯಾವ ಕಡೆಯಿಂದ ಬರುತ್ತದೆಯೋ ತಿಳಿಯುವುದೇ ಕಷ್ಟ. ಸಿನಿಮಾ ನಟರಾಗಬೇಕು ಎಂದು ಜೀವನಪೂರ್ತಿ ಹಂಬಲಿಸಿ, ಎಷ್ಟೆಲ್ಲಾ ಪರದಾಟ ಮಾಡಿ, ಏನೇನೋ ಸರ್ಕಸ್ ಮಾಡಿ, ಇದ್ದಬಿದ್ದ ದುಡ್ಡು ಕಳೆದುಕೊಂಡು, ಏನೇನೋ ಅನಾಹುತ ಮಾಡಿಕೊಂಡರೂ ಸೈಡ್ ರೋಲ್ ಕೂಡ ಸಿಗದವರು ಎಷ್ಟೋ ಮಂದಿ ಇದ್ದಾರೆ. ಆದರೆ ಒಂದು ಸೆಲ್ಫಿಗಾಗಿ ಮಾತ್ರ ಹೋಗಿ ಇಲ್ಲೊಬ್ಬ, ಸಿನಿಮಾ ಹೀರೋನೇ ಆಗಿಬಿಟ್ಟಿದ್ದಾರೆ. ಅವರೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ದಡ್ಡ ಪ್ರವೀಣ ಅಲಿಯಾಸ್ ರಂಜನ್.</p><img><p>ಅವರೀಗ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ತಮ್ಮ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ನಟನೆಯೂ ಬರಲ್ಲ, ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಆದರೆ ಕಿರಿಕ್ ಪಾರ್ಟಿ ಸಿನಿಮಾ ಆಡಿಷನ್ ನಡೆಯುತ್ತಿತ್ತು. ಆ ಸಮಯದಲ್ಲಿ ರಿಷಬ್ ಶೆಟ್ಟಿ ಅವರು ಬಂದಾಗ, ಅವರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಷ್ಟೇ. ನನ್ನ ಅದೃಷ್ಟವೇ ಬದಲಾಯಿತು ಎಂದಿದ್ದಾರೆ. ಸಂಜನ್ ಆಗಿದ್ದವರು ರಂಜನ್ ಎಂದು ರಿಷಬ್ ಶೆಟ್ಟಿ ಅವರೇ ನಾಮಕರಣ ಮಾಡಿದ್ದಾರೆ.</p><img><p>ಅವರ ಬಳಿ ಸೆಲ್ಫಿಗಾಗಿ ತುಂಬಾ ಹೊತ್ತು ಕಾದೆ. ಆಡಿಷನ್ಗೆ ಬಂದವರು ಟೋಕನ್ ತೆಗೆದುಕೊಳ್ಳಬೇಕು ಎಂದರು. ನಾನೇನು ಆಡಿಷನ್ಗೆ ಹೋಗಿರಲಿಲ್ಲ. ಬದಲಿಗೆ ಸೆಲ್ಫಿಗಾಗಿ ಹೋಗಿದ್ದೆ. ಆದರೂ ಟೋಕನ್ ತೆಗೆದುಕೊಂಡೆ. ರಿಷಬ್ ಶೆಟ್ಟಿ ಅವರ ಬಳಿ ಹೋಗುತ್ತಲೇ ಅವರು, ನನ್ನನ್ನು ನೋಡಿ, ಆ್ಯಕ್ಟಿಂಗ್ ಬರತ್ತಾ ಕೇಳಿದ್ರು, ಇಲ್ಲ. ನಾನು ಸಿನಿಮಾಕ್ಕೆ ಬಂದಿಲ್ಲ, ಸೆಲ್ಫಿಗೆ ಬಂದಿದ್ದು ಎಂದೆ.</p><img><p>ಏನು ಬರತ್ತೆ ಕೇಳಿದ್ರು. ನಾನು ಹುಲಿವೇಷ ಬರುತ್ತೆ ಎಂದೆ. ಒಂದೆರಡು ಸ್ಟೆಪ್ ಹಾಕಿ ತೋರಿಸಿದೆ. ಬಳಿಕ ಡೈಲಾಗ್ ಕೊಟ್ಟರು. ನಾನು ಸರ್ ನನಗೆ ಆ್ಯಕ್ಟಿಂಗ್ ಬರಲ್ಲ, ಸೆಲ್ಫಿ ಕೊಡಿ ಅಂದೆ. ಹಾಗೇ ಹೋದೆ. ಆದರೆ ಹತ್ತು ದಿನ ಆದ್ಮೇಲೆ ಕಾಲ್ ಬಂತು. ಆಡಿಷನ್ ಇದೆ ಬನ್ನಿ ಅಂತ. ನಾನು ಹೋಗಲಿಲ್ಲ ಎಂದು ಹೇಳಿದ್ದಾರೆ ರಂಜನ್.</p><img><p>ಕೊನೆಗೆ ತುಂಬಾ ಸಲ ಕಾಲ್ ಬಂದಾಗ ಆಡಿಷನ್ಗೆ ಹೋದೆ. ಅಲ್ಲಿ ಬಂದವರೆಲ್ಲಾ ನನ್ನನ್ನು ವಿಚಿತ್ರವಾಗಿ ನೋಡತೊಡಗಿದರು. ಅವರೆಲ್ಲಾ ಸಿನಿಮಾದಲ್ಲಿ ನಟಿಸಲು ಬಂದಿದ್ದರೆ, ನನ್ನನ್ಯಾಕೆ ಇಷ್ಟು ಫೋರ್ಸ್ ಮಾಡುತ್ತಿದ್ದಾರೆ ಎನ್ನುವುದು ಅವರಿಗೂ ಅರ್ಥವಾಗಲಿಲ್ಲ, ನನಗೂ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ ರಂಜನ್. ಕೊನೆಗೂ ರಿಷಬ್ ಶೆಟ್ಟಿ ಅವರು ನನ್ನನ್ನೇ ಸೆಲೆಕ್ಟ್ ಮಾಡಿಬಿಟ್ಟರು. ಆ ಮೂಲಕ ನಾನು ಹೀರೋ ಆದೆ ಎಂದಿದ್ದಾರೆ. ರಂಜನ್ ಅವರು ಸಿನಿಮಾ ಹೀರೋ ಆಗಿರೋ ಈ ಸ್ಟೋರಿ ಸಿನಿಮೀಯ ರೀತಿಯಲ್ಲಿಯೇ ಇರುವುದು ರೋಚಕವಾಗಿದೆ.</p><img><p>ಅಂದಹಾಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (Sarkari Hiriya Prathamika shale Kasaragod) ಚಿತ್ರವು, ಗಡಿನಾಡು ಕಾಸರಗೋಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಗಳು ಏನಾಗುತ್ತಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ಈ ಸಿನಿಮಾದಲ್ಲಿ ಬಾಲ ಪ್ರತಿಭೆಗಳಾಗಿ ಮಿಂಚಿದವರು ದಡ್ಡ ಪ್ರವೀಣ ಮತ್ತು ಪಲ್ಲವಿ.</p><img><p>ನಾಲ್ಕು ವರ್ಷಗಳಿಂದ ಫೇಲ್ ಆಗಿ,ಫೇಲ್ ಆಗಿ ಏಳನೇ ಕ್ಲಾಸಲ್ಲೇ ಬಾಕಿಯಾದ ಚಿಗುರು ಮೀಸೆಯ ಯುವಕ ಪ್ರವೀಣ ಆಲಿಯಾಸ್ ದಡ್ಡ ಪ್ರವೀಣ. ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗನಿಗೆ ತನ್ನದೇ ಕ್ಲಾಸಿನ ಬ್ರಿಲಿಯಂಟ್ ಹುಡುಗಿ ಪಲ್ಲವಿ ಮೇಲೆ ಕ್ರಶ್. ಶಾಲೆಗಳಲ್ಲಿ ಸಾಮಾನ್ಯವಾಗಿ ನಡೆಯುವಂತಹ ಈ ಸಣ್ಣದಾದ ಆಕರ್ಷಣೆ ಬಗ್ಗೆ ಸಿನಿಮಾದಲ್ಲಿ ಅಮೋಘವಾಗಿ ತೋರಿಸಲಾಗಿತ್ತು. ಈ ಪಾತ್ರಕ್ಕೆ ರಂಜನ್ ಅವರೇ ಸೂಟ್ ಎಂದು ರಿಷಬ್ ಶೆಟ್ಟಿ ಅವರು ಅಂದುಕೊಂಡದ್ದು ಹುಸಿಯಾಗಲಿಲ್ಲ. ಅವರು ಅಷ್ಟು ಅದ್ಭುತವಾಗಿ ನಟಿಸಿದ್ದರು.</p><img><p>ಇದಾದ ಬಳಿಕ, ರಂಜನ್ ಅವರು ರಿಷಭ್ ಶೆಟ್ಟಿ ಅವರ (Rishabh Shetty) ಕಾಂತಾರ ಸಿನಿಮಾದಲ್ಲಿ ಮಿಂಚಿದರು. ಇದೀಗ ಆರಾಟ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಮಂಗಳೂರು ಕರಾವಳಿಯ ಸಂಪ್ರದಾಯ, ಆಚರಣೆಯ ಕಥೆಯನ್ನು ಹೇಳುವ ಈ ಸಿನಿಮಾ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ರಂಜನ್ ನಾಯಕರಾಗಿದ್ದು, ವೆನ್ಯಾ ರೈ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಗೆ ಅಪಾರ ಜನಮನ್ನಣೆ ದೊರೆತಿದೆ.</p>
Source link
ರಿಷಬ್ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ