ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟ ಶ್ರೀರಾಮ್ ಅವರ ವಿವಾಹ ನೆರವೇರಿದೆ. ಸ್ಫೂರ್ತಿ ಎಂಬುವವರ ಜೊತೆ ಶ್ರೀರಾಮ್ ವಿವಾಹ ಆಗಿದ್ದಾರೆ. ಭಾನುವಾರ (ನವೆಂಬರ್ 30) ಅವರು ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
ಶ್ರೀರಾಮ್ ಅವರದ್ದು ಲವ್ ಮ್ಯಾರೇಜ್ ಅಲ್ಲ. ಇದೊಂದು ಪಕ್ಕಾ ಅರೇಂಜ್ ಮ್ಯಾರೆಜ್ ಎನ್ನುತ್ತಿದ್ದಾರೆ. ಮೈಸೂರಿನಲ್ಲಿ ಇವರ ವಿವಾಹ ನೆರವೇರಿದೆಯಂತೆ. ಶ್ರೀರಾಮ್ ಮದುವೆ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಸಾಮಾನ್ಯವಾಗಿ ವಿವಾಹ ಆಗುವಾಗ ಹುಡುಗಿ ಚಿತ್ರರಂಗದವರಲ್ಲದೆ ಇದ್ದರೆ ಸೆಲೆಬ್ರಿಟಿಗಳು ಅವರ ಕಿರುಪರಿಚಯ ಮಾಡಿಕೊಡುತ್ತಾರೆ. ಆದರೆ, ಶ್ರೀರಾಮ್ ಅವರು ಸದ್ಯಕ್ಕೆ ಆ ರೀತಿ ಮಾಡಿಲ್ಲ. ಅವರು ತಾವು ಕೈ ಹಿಡಿದ ಹುಡುಗಿಯ ಹಿನ್ನೆಲೆಯನ್ನು ಇನ್ನಷ್ಟೇ ತಿಳಿಸಬೇಕಾಗಿದೆ.
ಶ್ರೀರಾಮ್ ಅವರು 2016ರಲ್ಲಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿತು. ಆ ಬಳಿಕ ಅವರಿಗೆ ಸಾಕಷ್ಟು ಆಫರ್ಗಳು ಹುಡುಕಿ ಬಂದವು.
2018ರಲ್ಲಿ ಮೇಘನಾ ರಾಜ್ ಜೊತೆ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಮಾಡಿದರು. ಇದು ಅವರು ನಟಿಸಿದ ಮೊದಲ ಸಿನಿಮಾ. ‘ಗಜಾನನ ಆಯಂಡ್ ಗ್ಯಾಂಗ್’, ‘ಹೊಂದಿಸಿ ಬರೆಯಿರಿ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರು ಸದ್ದಿಲ್ಲದೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ ಎಂಬುದು ವಿಶೇಷ.




