ಬೆಳಗಾವಿ, (ನವೆಂಬರ್ 27): ಕರ್ನಾಟಕ ಕಾಂಗ್ರೆಸ್ನಲ್ಲಿ ಕುರ್ಚಿ ಗುದ್ದಾಟ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ದಿಕ್ಕು ಬದಲಿಸಿದೆ. ಹೀಗಾಗಿ ಕುರ್ಚಿ ಗುದ್ದಾಟ ತಾರಕಕ್ಕೇರಿದ್ದು, ಸಿಎಂ ಮತ್ತು ಡಿಸಿಎಂ ಬಣಗಳ ತಂತ್ರ ಪ್ರತಿತಂತ್ರ ಜೋರಾಗಿದೆ.. ಈ ಬಣ ಬಡಿದಾಟ ಮತ್ತು ಕುರ್ಚಿ ಕಾಳಗದ ಮಧ್ಯೆ ಸ್ವಾಮೀಜಿಗಳೂ ಸಹ ಅಖಾಡಕ್ಕೆ ಇಳಿದಿದ್ದಾರೆ. ಡಿಕೆಶಿ ಸಿಎಂ ಆಗಬೇಕು ಎಂದ ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದಾರೆ. ಮತ್ತೊಂದೆಡೆ ಕಾಗಿನೆಲೆ ಪೀಠದ ನಿರಂಜನಾನಂದ ಶ್ರೀ ಯಾರು ಸಿಎಂ ಆಗಬೇಕು ಅಂತ ಶಾಸಕರು ನಿರ್ಣಯಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದೀಗ ಮತ್ತೋರ್ವ ಸ್ವಾಮೀಜಿ ಧ್ವನಿಗೂಡಿಸಿದ್ದು, ಸಿದ್ದರಾಮಯ್ಯ ಹಠ ಬಿಟ್ಟು ಡಿ.ಕೆ.ಶಿವಕುಮಾರ್ ಅವರಿಗೆ ಕುರ್ಚಿ ಬಿಟ್ಟುಕೊಡಲಿ ಎಂದು ಕಿತ್ತೂರಿನ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಟಿವಿ9ಗೆ ಮಾತನಾಡಿದ ಕಿತ್ತೂರಿನ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ಎರಡೂವರೆ ವರ್ಷ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಸಹಕರಿಸಿದ್ದಾರೆ. ವಚನ ಭ್ರಷ್ಟರಾಗದೆ ಸಿದ್ದರಾಮಯ್ಯ ಡಿಕೆಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ಸರ್ಕಾರವೇ ಪತನ . ನಾನು ಯಾರ ಪರವಾಗಿಯೂ ಇಲ್ಲ, ನಾನು ಯಾರ ವಿರುದ್ಧವೂ ಇಲ್ಲ. ಮಾನವೀಯತೆ ದೃಷ್ಟಿಯಿಂದ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.