ಎಸ್ಪಿ ಬಾಲಸುಬ್ರಹ್ಮಣ್ಯಂ (ಎಸ್ಪಿ ಬಾಲಸುಬ್ರಹ್ಮಣ್ಯಂ), ಭಾರತ ಕಂಡ ಅತ್ಯುತ್ತಮ ಗಾಯಕರಲ್ಲಿ ಒಬ್ಬರು. ಸಾವಿರಾರು ಹಾಡುಗಳನ್ನು ಹಲವಾರು ಭಾಷೆಗಳಲ್ಲಿ ಹಾಡಿದ್ದ ಬಾಲಸುಬ್ರಹ್ಮಣ್ಯಂ ಅವರನ್ನು ಎಲ್ಲ ಭಾಷಿಕರೂ ಗೌರವಿಸುತ್ತಾರೆ. ರಾಜ್ಯ, ಭಾಷೆಯ ಗಡಿಗಳನ್ನು ದಾಟಿ ಬಾಲಸುಬ್ರಹ್ಮಣ್ಯಂ ಅವರು ಪ್ರೀತಿ ಪಾತ್ರರಾಗಿದ್ದರು. ಅಜಾತ ಶತ್ರು ಎನಿಸಿಕೊಂಡವರು ಬಾಲಸುಬ್ರಹ್ಮಣ್ಯಂ ಆದರೆ, ಕೋವಿಡ್ ಅವರನ್ನು ಅಕಾಲಿಕವಾಗಿ ಬಲಿ ಪಡೆದರು. ಅಭಿಮಾನಿಗಳು ಸೂಕ್ತ ವಿದಾಯವನ್ನು ಸಹ ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಲಾಗಲಿಲ್ಲ. ಅದೇ ಕಾರಣಕ್ಕೆ ಇತ್ತೀಚೆಗೆ ತೆಲಂಗಾಣ ಸರ್ಕಾರ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆ ಸ್ಥಾಪಿಸಿ ಗೌರವಿಸಿತು. ಆದರೆ ಅದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ವ್ಯಕ್ತವಾಗಿದೆ.
ತೆಲಂಗಾಣ ಸರ್ಕಾರವು ಹೈದರಾಬಾದ್ನ ಜನಪ್ರಿಯ ಸಾಂಸ್ಕೃತಿಕ ಕೇಂದ್ರವಾಗಿರುವ ರವೀಂದ್ರ ಭಾರತಿ ಎದುರು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಆದರೆ ಇದನ್ನು ವಿರೋಧಿಸಿದ್ದು, ಅದೇ ಪ್ರತಿಮೆಯ ಎದುರು ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ ಎಸ್ ಪಿಬಿ ಅವರ ಹತ್ತೀರ ಸಂಬಂಧಿ ಮೇಲೆ ಸಹ ಪ್ರತಿಭಟನಾಕಾರರು ಏರು ಧ್ವನಿಯಲ್ಲಿ ಜಗಳ ಮಾಡಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಎಸ್ ಪಿ ಬಾಲಸುಬ್ರಹ್ಮಣ್ಯಂ ನಾಲ್ಕನೇ ಪುಣ್ಯತಿಥಿ; ಮುಖ್ಯ ರಸ್ತೆಯೊಂದಕ್ಕೆ ಗಾಯಕನ ಹೆಸರಿಟ್ಟ ಸಿಎಂ
ತಾವು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿರುವ ಪೃಥ್ವಿರಾಜ್ ಯಾದವ್ ಎಂಬವರು, ರವೀಂದ್ರ ಭಾರತಿ ಎದುರು ಎಸ್ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆ ಸ್ಥಾಪಿಸಲು ವಿರೋಧಿಸಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ಆಂಧ್ರ ಪ್ರದೇಶ ರಾಜ್ಯಕ್ಕೆ ಸೇರಿದ ಕಲಾವಿದ ಅವರ ಪ್ರತಿಮೆಯನ್ನು ಹೈದರಾಬಾದ್ನ ಪ್ರಮುಖ ಕಲಾ ಕೇಂದ್ರದ ಮುಂದೆ ಸ್ಥಾಪಿಸುವುದು ಅನವಶ್ಯಕ. ತೆಲಂಗಾಣದ ಕಲಾವಿದರಾದ ಗದರ್, ಅಂದೆ ಶ್ರೀ ಅವರ ಪ್ರತಿಮೆಗಳನ್ನು ಸ್ಥಾಪಿಸಿ ಎಂದು ಅವರು ಒತ್ತಾಯಿಸಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರ ಹತ್ತಿರದ ಸಂಬಂಧಿ, ಖ್ಯಾತ ನಟ ಶುಭಲೇಖ ಸುಧಾಕರ್ ಅವರು ಈ ವೇಳೆ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಬಾಲಸುಬ್ರಹ್ಮಣ್ಯಂ ಅವರು ತೆಲುಗು ಭಾಷೆಗೆ, ಕಲೆಗೆ ನೀಡುವ ಕೊಡುಗೆಯನ್ನು ವಿವರಿಸುವ ಯತ್ನ ಮಾಡಿದರು. ಆಗ ಪೃಥ್ವಿರಾಜ್ ಯಾದವ್, ತನಗೆ ಬಾಲಸುಬ್ರಹ್ಮಣ್ಯಂ ಯಾರೆಂಬುದು ಗೊತ್ತಿಲ್ಲ ಎಂದು ವಿತಂಡವಾದ ಮಾಡಿದರು. ಕೊನೆಗೆ ಸುಧಾಕರ್ ಅವರು ಬೇಸರದಿಂದ ತೆರಳಿದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತ ಪೃಥ್ವಿರಾಜ್ ಅವರ ವರ್ತನೆಯನ್ನು ವಿರೋಧಿಸಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ತೆಲುಗು ರಾಜ್ಯಗಳ ಹೆಮ್ಮೆಯ ಪುತ್ರ. ಅವರಿಗೆ, ತೆಲುಗು ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ