ಬೆಂಗಳೂರು, (ಫೆಬ್ರವರಿ 04): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ (ಬಿಜೆಪಿ ಮತ್ತು ಜೆಡಿಎಸ್) ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ(ಫೆ.03) ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಇಂದು (ಫೆ.04) ಸಹ ಪ್ರತಿಭಟನೆ ಮುಂದುವರಿದಿದೆ. ಈ ವೇಳೆ ಬಿಜೆಪಿ ಶಾಸಕ ಶರಣು ಸಲಗರ್ ಹಾಗೂ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡ ಪ್ರಸಂಗ ನಡೆದಿದೆ.
ದೇವೇಗೌಡ್ರಿಗೆ ದೋಖಾ ಮಾಡಿದ ಶಿವಲಿಂಗೇಗೌಡಗೆ ಧಿಕ್ಕಾರ ಎಂದು ಶರಣು ಸಲಗರ್ ಘೋಷಣೆ ಕೂಗಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಆಕ್ರೋಶ ಕಿಡಿಕಾರಿದರು.