ಖ್ಯಾತ ಗಾಯಕ ಉದಿತ್ ನಾರಾಯಣ್ (ಉದಿತ್ ನಾರಾಯಣ) ಈಗ ಸುದ್ದಿಯಲ್ಲಿದ್ದಾರೆ. ಅವರು ಈ ಮೊದಲು ಕಾನ್ಸರ್ಟ್ ವೇಳೆ ಅಭಿಮಾನಿಗಳಿಗೆ ಕಿಸ್ ಮಾಡಿ ವಿವಾದ ಮಾಡಿಕೊಂಡಿದ್ದರು. ಈ ಬಾರಿ ಅವರು ಮೊದಲ ಪತ್ನಿಯಿಂದಲೇ ಗಂಭೀರ ಆರೋಪ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಉದಿತ್ ಹಾಗೂ ಅವರ ಇಬ್ಬರು ಸಹೋದರರು ಸೇರಿ ಮೋಸದಿಂದ ತಮ್ಮ ಗರ್ಭಕೋಶ ತೆಗೆಸಿದ್ದಾರೆ ಎಂದು ಉದಿತ್ ಮೊದಲ ಪತ್ನಿ ರಂಜನಾ ಆರೋಪಿಸಿದ್ದಾರೆ. ರಂಜನಾ ಅವರು ಬಿಹಾರದ ಸುಪೌಲ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಫೆಬ್ರವರಿ 10 ರಂದು ದೂರು ದಾಖಲು ಮಾಡಿದ್ದಾರೆ. ನನ್ನ ಒಪ್ಪಿಗೆ ಇಲ್ಲದೆ ಪತಿ ಈ ಕೆಲಸ ಮಾಡಿರುವುದು ಅವರ ಆರೋಪ.
ವೈದ್ಯಕೀಯ ಚಿಕಿತ್ಸೆಗೆಂದು ತೆರಳಿದಾಗ ಗರ್ಭಕೋಶ ಇಲ್ಲದ ವಿಷಯ ರಂಜನಾಗೆ ಗೊತ್ತಾಗಿದೆಯಂತೆ. 1984 ಡಿಸೆಂಬರ್ 7 ರಂದು ಹಿಂದೂ ಪದ್ಧತಿ ಪ್ರಕಾರ ರಂಜನ್ ಹಾಗೂ ಉದಿತ್ ವಿವಾಹ ಆದರು. ಉದಿತ್ ಸಂಗೀತ ವೃತ್ತಿಯನ್ನು ಮುಂದುವರಿಸಲು 1985 ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ದೀಪಾ ನಾರಾಯಣ್ ಅವರ ಮದುವೆ ಆಗಿದ್ದಾರೆ ಎಂಬ ವಿಷಯ ರಂಜನಾಗೆ ತಿಳಿಯಿತು. ಕೇಳಿದ್ರೆ ಯಾವುದೋ ಒಂದು ಸಬೂಬು ಹೇಳಿ ವಿಷಯ ಮರೆಸುತ್ತಿದ್ದರಂತೆ ಉದಿತ್.
‘1996ರಲ್ಲಿ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ, ಉದಿತ್ ತನ್ನ ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಜೊತೆಗೂಡಿ ದೆಹಲಿಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತನ್ನ ಒಪ್ಪಿಗೆಯಿಲ್ಲದೆ ಗರ್ಭಕೋಶವನ್ನು ತೆಗೆಸಿದರು. ಆ ಸಮಯದಲ್ಲಿ ದೀಪಾ ನಾರಾಯಣ್ ಕೂಡ ಆಸ್ಪತ್ರೆಯಲ್ಲಿದ್ದರು’ ಎಂದು ರಂಜನಾ ಆರೋಪಿಸಿದ್ದಾರೆ.
ಇದನ್ನೂ ಓದಿ: ನಿಲ್ಲುತ್ತಿಲ್ಲ ಉದಿತ್ ನಾರಾಯಣ್ ಹಾವಳಿ; ಕಾನ್ಸರ್ಟ್ ವೇಳೆ ಮತ್ತೋರ್ವ ಅಭಿಮಾನಿಯ ತುಟಿಗೆ ಚುಂಬನ
2006ರಲ್ಲಿ ಮುಂಬೈಗೆ ಭೇಟಿ ನೀಡಿದಾಗ, ಉದಿತ್ ಮತ್ತು ದೀಪಾ ಅವರಿಂದ ದೌರ್ಜನ್ಯಕ್ಕೊಳಗಾಗಿರೋದಾಗಿ ಅವರು ಹೇಳಿದ್ದಾರೆ. ‘ನಾನು ಅಸ್ವಸ್ಥಳಾಗಿದ್ದೇನೆ. ಹೀಗಾಗಿ, ಉದಿತ್ ಅವರ ಬೆಂಬಲದ ಅಗತ್ಯವಿದೆ’ ಎಂದು ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.