ಬಾಗಲಕೋಟೆ, ಏಪ್ರಿಲ್ 14: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ (ಉಪಚುನಾವಣೆ) ಎಲ್ಲರ ಗಮನ ಸೆಳೆದಿವೆ. ಉಪಚುನಾವಣೆ ಪ್ರಯುಕ್ತ ಘಟಾನುಘಟಿ ನಾಯಕರು ಬಂದು ಮತಯಾಚನೆ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ನಾಯಕರು ಆಡಿದ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿವೆ. ಮಾಜಿ ಸಚಿವ ಸಿಸಿ ಪಾಟಿಲ್ ಕುರುಬ ಸಮಾಜದ ಬಗ್ಗೆ ಪದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ವೈ ಮೇಟಿ ಅಕಾಲಿಕ ನಿಧನದಿಂದ ಬಾಗಲಕೋಟೆಗೆ ಉಪಚುನಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಎರಡು ಪ್ರಮುಖ ಪಕ್ಷದ ಘಟಾನುಘಟಿ ನಾಯಕರು ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ಕೆಲ ನಾಯಕರು ನಾಲಿಗೆ ಹರಿಬಿಟ್ಟು ಸುದ್ದಿಯಾಗಿದ್ದರು.
ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ದೂರು
ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಸಿದ್ದರಾಮಯ್ಯ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು. ಮಾಂಸನಾದ್ರೂ ತಿನ್ನು, ಸುನ್ನತ್ ಆದರೂ ಮಾಡಿಕೋ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕಾಂಗ್ರೆಸ್ ಮುಖಂ ವಕೀಲ ರಮೇಶ್ ಬದ್ನೂರು ನವನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಿಸಿ ಪಾಟೀಲ್ ಕ್ಷಮೆ ಕೇಳಬೇಕು: ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಆಗ್ರಹ
ಆದರೆ ಪಂಚಮಸಾಲಿ ಸಮಾಜದ ಪ್ರಚಾರ ಸಭೆ ವೇಳೆ ಮಾಜಿ ಸಚಿವ ಸಿಸಿ ಪಾಟೀಲ್ ಆಡಿದ ಮಾತಿಗೆ ಕುರುಬ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟುರ್ ಎಂಬ ಪದ ಬಳಕೆ ಮಾಡಿರುವುದು ಕುರುಬ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಡಿಬಿ ಸಿದ್ದಾಪುರ ಸಿ ಪಾಟೀಲ್ ಕ್ಷಮೆ ಕೇಳಲು ಕೋರಿದ್ದಾರೆ.
ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ
ಸಿಸಿ ಪಾಟೀಲ್ ಆಡಿದ ಮಾತಿಗೆ ಬಿಜೆಪಿ ಕುರುಬ ಸಮಾಜದ ನಾಯಕರೂ ಕಿಡಿ ಕಾರುತ್ತಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಾಯಿ ಮಗನ ರೀತಿ ಸಂಬಂಧ ಹೊಂದಿದವರು. ಆದರೆ ಸಿಸಿ ಪಾಟೀಲ್ ಇಂತಹ ಮಾತುಗಳನ್ನಾಡಿ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಒಂದು ವಾರದೊಳಗೆ ಸಿಸಿ ಪಾಟೀಲ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನರಗುಂದದಲ್ಲಿರುವ ಅವರ ಮನೆಗೆ ಕುರಿ ಸಮೇತ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ
ಇನ್ನು ಪ್ರಚಾರದ ವೇಳೆ ಮತದಾರರನ್ನು ಸೆಳೆಯೋದಕ್ಕೆ ನಾಯಕರು ವಿವಿಧ ಟ್ರಿಕ್ ಬಳಸಿದ್ದರು. ಸಮಾಜದ ಸಭೆಗಳ ಮೂಲಕ ಆಯಾ ಸಮಾಜದ ಮತ ಸೆಳೆಯಲು ಪ್ರಯತ್ನಿಸಿದರು. ಆದರೆ ಮಾತಿನ ಭರದಲ್ಲಿ ನಾಲಿಗೆ ಹಿಡಿತ ಕಳೆದುಕೊಂಡು ಆಕ್ರೋಶಕ್ಕೆ ಕಾರಣ. ಒಟ್ಟಿನಲ್ಲಿ ಪ್ರಚಾರದ ವೇಳೆ ಆಡಿದ ಮಾತುಗಳು ನಾಯಕರಿಗೆ ಮುಳುವಾಗುತ್ತಿವೆ. ಆಡಿದ ಮಾತಿಗೆ ಸ್ವಪಕ್ಷದಿಂದಲೇ ಇದೀಗ ವಿರೋಧ ಎದುರಿಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.