ಚಾಮರಾಜನಗರ, ಏ.17: ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ತವರು ಮನೆಗೆ ಹೋದ ಮಹಿಳೆಗೆ ಗ್ರಾಮದ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅನಿಷ್ಠ ಪದ್ಧತಿಯನ್ನು ಮುಂದುವರಿಸಿದ್ದಾರೆ.ಇದೀಗ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯರಂಬಾಡಿ ಮೂಲದ ಕೆಂಚಮ್ಮ ಎಂಬುವವರು ಹೂಗ್ಯಂ ಗ್ರಾಮದ ರಾಮು ಎಂಬುವವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಕೆಂಚಮ್ಮ ಅವರ ತಾಯಿಗೆ ಆರೋಗ್ಯ ಕೈಕೊಟ್ಟ ಕಾರಣ, ಅವರನ್ನು ಉಪಚರಿಸಲು ಕೆಂಚಮ್ಮ ತವರು ಮನೆಗೆ ತೆರಳಿದ್ದರು.
ತವರು ಮನೆಯಲ್ಲಿ ಒಂದು ತಿಂಗಳಿಗೂ ಅಧಿಕ ಕಾಲ ಉಳಿದುಕೊಂಡಿದ್ದಕ್ಕೆ ಗ್ರಾಮದ ಯಜಮಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಚಮ್ಮ ವಾಪಸ್ ಬರುವುದು ತಡವಾಯಿತು ಎಂಬ ಕ್ಷುಲ್ಲಕ ಕಾರಣ ನೀಡಿ ಅವರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ. ಬಹಿಷ್ಕಾರ ಹಿಂತೆಗೆದುಕೊಳ್ಳಲು ಲಕ್ಷಾಂತರ ರೂಪಾಯಿ ದಂಡ ನೀಡಬೇಕು ಎಂದು ಸೂಚಿಸಿದ್ದಾರೆ. ಕೇವಲ ಕೆಂಚಮ್ಮ ಇದೆ, ಗ್ರಾಮದ ಇನ್ನೂ ಮೂರ್ನಾಲ್ಕು ಮಂದಿಗೆ ಈ ರೀತಿ ಬಹಿಷ್ಕಾರ ಹಾಕಲಾಗಿದೆ ಎಂಬ ಸಂಸ್ಥೆಯ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಗ್ರಾಮದ ಯಜಮಾನರ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಕೆಂಚಮ್ಮ, ನ್ಯಾಯಕ್ಕಾಗಿ ರಾಮಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಜೊತೆಗೆ, ಅನಿಷ್ಠ ಪದ್ಧತಿಯ ವಿರುದ್ಧ ಕಾನೂನು ಹೋರಾಟ ನಡೆಸಲು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ