ಧಾರವಾಡ: ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ಅಹಂಕಾರ ನೆತ್ತಿಗೇರಿದಾಗ, ಆಡಿದ್ದೇ ಆಟ ಎಂದು ಮೆರೆದಾಗ ಕಾಲವೊಂದು ಉತ್ತರ ನೀಡಿಯೇ ನೀಡುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಎಂಬಂತೆ ಧಾರವಾಡದ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಅವರ ‘ಅಹಂಕಾರದ ಅರಮನೆ’ ಇಂದು ಕುಸಿದು ಬಿದ್ದಿದೆ. ದಶಕದ ಹಿಂದೆ ನಡೆದ ಆ ಒಂದು ಹತ್ಯೆ ಪ್ರಕರಣ, ಇಂದು ಒಬ್ಬ ಪ್ರಭಾವಿ ನಾಯಕನ ರಾಜಕೀಯ ಭವಿಷ್ಯವನ್ನೇ ಕರಾಳವಾಗಿಸಿದೆ.
ಏನಿದು ಪಾಪದ ಕೋಟೆ?
ಧಾರವಾಡದಲ್ಲಿ ವಿನಯ್ ಕುಲಕರ್ಣಿ ಎಂದರೆ ಒಂದು ಕಾಲದಲ್ಲಿ ಅಧಿಪತಿ ಎಂಬಂತಿದ್ದರು. ಮಾಜಿ ಸಚಿವರಾಗಿ, ಜಿಲ್ಲೆಯ ಪ್ರಬಲ ಲಿಂಗಾಯತ ನಾಯಕರಾಗಿ ಬೆಳೆದಿದ್ದ ಕುಲಕರ್ಣಿ ಅವರಿಗೆ ಅಧಿಕಾರ ಮತ್ತು ಬಲದ ಅಹಂಕಾರವಿತ್ತು ಎನ್ನಲಾಗುತ್ತಿತ್ತು. ಆದರೆ, 2016ರ ಜೂನ್ 15ರಂದು ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಗೌಡರ್ ಹತ್ಯೆ ಪ್ರಕರಣ ಇಡೀ ಕರ್ನಾಟಕವನ್ನೇ ನಡುಗಿಸಿತ್ತು. ಈ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಕೇಳಿಬಂದಾಗ, ಅದು ಕೇವಲ ರಾಜಕೀಯ ಪಿತೂರಿ ಎಂದು ಬಿಂಬಿಸಲಾಗಿತ್ತು. ಆದರೆ, ಕಾನೂನಿನ ಕುಣಿಕೆ ನಿಧಾನವಾಗಿಯಾದರೂ ಬಿಗಿಯಾಗುತ್ತಾ ಬಂದಿತು.
ರಾಜಾಹುಲಿ ಬಿಎಸ್ವೈ ಮಾಡಿದ ಆ ಭೀಷ್ಮ ಪ್ರತಿಜ್ಞೆ!
ಯೋಗೀಶ್ ಗೌಡ ಹತ್ಯೆಯಾದ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹತ್ತಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಧಾರವಾಡದ ಬೀದಿಗಳಲ್ಲಿ ಗುಡುಗಿದ್ದರು. ‘ಯೋಗೀಶ್ ಗೌಡ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಜೈಲಿಗೆ ಕಳುಹಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ’ ಎಂದು ರಾಜಾಹುಲಿ ಪ್ರತಿಜ್ಞೆ ಮಾಡಿದ್ದರು. ಅಂದು ಯಡಿಯೂರಪ್ಪ ಮಾಡಿದ ಆವೇಶದ ಮಾತುಗಳು ಇಂದು ನಿಜವಾಗುವ ಹಂತಕ್ಕೆ ಬಂದು ನಿಂತಿವೆ. ಸಿಬಿಐ ತನಿಖೆ ಚುರುಕುಗೊಂಡ ನಂತರ ವಿನಯ್ ಕುಲಕರ್ಣಿ ಅವರ ಮುಖವಾಡ ಕಳಚಿಬಿದ್ದಿತ್ತು.
ಸಿಬಿಐ ಎಂಟ್ರಿ ಮತ್ತು ರೋಚಕ ತಿರುವು:
ಸ್ಥಳೀಯ ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲದಿದ್ದಾಗ ಪ್ರಕರಣ ಸಿಬಿಐ ಕೈಗೆ ಹಸ್ತಾಂತರವಾಯಿತು. ಸಿಬಿಐ ಅಧಿಕಾರಿಗಳು ಪ್ರವೇಶಿಸುತ್ತಿದ್ದಂತೆ ಪ್ರಕರಣಕ್ಕೆ ಹೊಸ ರೆಕ್ಕೆಗಳು ಬಂದವು. ಸಾಕ್ಷ್ಯ ನಾಶ, ಬೆದರಿಕೆ ಮತ್ತು ರಾಜಕೀಯ ಪ್ರಭಾವದ ನಡುವೆಯೂ ಸಿಬಿಐ ಭದ್ರವಾದ ಸಾಕ್ಷ್ಯಗಳನ್ನು ಕಲೆಹಾಕಿತು. ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ವಿನಯ್ ಕುಲಕರ್ಣಿ ಕಂಬಿ ಎಣಿಸುವಂತಾಯಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರವೇಶ ನಿಷೇಧವಿದ್ದರೂ ಸಹ ಗೆದ್ದು ಬೀಗಿದ್ದ ಕುಲಕರ್ಣಿಗೆ, ಈಗ ಕಾನೂನಿನ ಅಂತಿಮ ತೀರ್ಪು ಸಿಂಹಸ್ವಪ್ನವಾಗಿ ಪರಿಣಮಿಸಿದೆ.
ಶಿಕ್ಷೆಯ ಪ್ರಮಾಣ ಮತ್ತು ಶಾಸಕ ಸ್ಥಾನದ ತೂಗುಗತ್ತಿ:
ಪ್ರಕರಣದ ವಿಚಾರಣೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಕೋರ್ಟ್ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಪ್ರಮಾಣದ ಮೇಲೆ ಎಲ್ಲರ ಕಣ್ಣಿದೆ. ಒಂದು ವೇಳೆ ವಿನಯ್ ಕುಲಕರ್ಣಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದಲ್ಲಿ, ಅವರ ಶಾಸಕ ಸ್ಥಾನವೂ ಅಪಾಯಕ್ಕೆ ಸಿಲುಕಲಿದೆ. ಜನಪ್ರತಿನಿಧಿಗಳ ಕಾಯ್ದೆಯಡಿ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ದಶಕದ ಕಾಲ ನಡೆದ ಈ ಸುದೀರ್ಘ ಹೋರಾಟಕ್ಕೆ ಈಗ ನ್ಯಾಯ ಸಿಗುವ ಕಾಲ ಸನ್ನಿಹಿತವಾಗಿದೆ. ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ, ಅಧಿಕಾರದ ಅಮಲಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡವರಿಗೆ ಕಂಬಿ ಹಿಂದಿನ ಕರಾಳ ಭವಿಷ್ಯ ಕಾದಿದೆ. ಅಂದು ಯಡಿಯೂರಪ್ಪ ಮಾಡಿದ್ದ ಪ್ರತಿಜ್ಞೆ ಇಂದು ಪೂರ್ಣಗೊಂಡಂತೆ ಭಾಸವಾಗುತ್ತಿದೆ.